Tuesday, December 31, 2013

ಹೃದಯ ಪ್ರೀತಿ ಸಂಪನ್ನ


ಎಲ್ಲೆಂದು ಹುಡುಕಲಿ ನಿನ್ನ
ಬರಿ ಕನಸಲ್ಲೇ ಕಾಡುತಿರುವೆ ಯನ್ನ
ಕೊಡಬಾರದೇ ಮುನ್ಸೂಚನೆ ನೀ ಬರುವ ಮುನ್ನ !!

                                                                     ಕಲ್ಲೆಂದು ಕರೆದರು ನನ್ನ
                                                                     ಹೃದಯ ವೇದನೆಯ ಪಟ್ಟಿತ್ತು ಚಿನ್ನ
                                                                     ಕೂಡಬಾರದೇ ನೀ ಇಂದಾದರೂ ನನ್ನ ಪ್ರೀತಿಯನ್ನ !!

ಇನ್ನೆಂದು ಸೇರುವಿಯೇ ನನ್ನನ್ನ
ನೀ ನನ್ನ ಹೃದಯಕ್ಕೆ ಇಟ್ಟೆಯಲ್ಲ ಕನ್ನ
ಕೆಡಬಾರದು ನಿನ್ನ ವಿನಃ ನಾನು ಹೃದಯ ಪ್ರೀತಿ ಸಂಪನ್ನ !!

--ಶ್ರೀಧರ ಐತಾಳ ದೇವಳಿ

ಸಂಸಾರಿಯ ಪರಿತಾಪ






ಅರಗಿಣಿ ನಿನ್ನಯ ಮೋಹಕ ನೋಟ
ಹಿಡಿದಿಟ್ಟಿತು ನನ್ನಯ ದೃಷ್ಟಿಯ ಓಟ
ಶೃಂಗಾರದ ಒಡತಿಯ ಆ ಮೈಮಾಟ
ಮರೆತೇ ನಾನಲ್ಲಿ ಬ್ರಹ್ಮಚರ್ಯದ ಪಾಠ  !!

ನೋಡಿದೆ ನಿನ್ನ ವೈಯಾರದ ನಡಿಗೆ
ಓಡಿತು ಮನಸದು ನಿನ್ನಯ ಬಳಿಗೆ
ಬಯಸಿತು ನಿನ್ನನು ಕ್ಷಣಗಳ ಒಳಗೆ
ಮರೆಯೆನು ಅದುವೇ ಅಮೃತ ಘಳಿಗೆ  !!

ನೆನೆಯುವೆ ನಿನ್ನ ಮುಗ್ದ ನಗುವನು
ತಪ್ಪಿಸಿರಲಾರದ ಕಣ್ ಸೆಳೆತವನು
ಬಯಸಿದೆ ಕದ್ದು ನೋಡಲು ನಿನ್ನನು
ಮೆಚ್ಚಿದ ಮನಕೆ ಅಲ್ಲಿ ತಂಪನೀಯುವೆನು !!


--ಶ್ರೀಧರ ಐತಾಳ ದೇವಳಿ 

 

Monday, December 30, 2013

ಆಮ್ ಆದ್ಮಿ



ಚುನಾವಣೆಯಲ್ಲಿ ಕಾಂಗ್ರೆಸ್ಸ್ ದ್ವೇಷ
ಅಧಿಕಾರಕ್ಕೆ ಬರಲು ಅದೇ ಕಾಂಗ್ರೆಸ್ಸ್ ಸಖ್ಯ
ಎಲ್ಲಿದೆ ನಿಮಗೆ ನೈತಿಕತೆ
ಗದ್ದುಗೆ ಪಡೆಯಲು ಮಾಡಿದ ಸಾಹಸಕತೆ ??

ಸದ್ದಿಲ್ಲದೇ ವಿದೇಶದಿಂದ ಹರಿದು ಬಂತು
ಕಪ್ಪೋ ಬಿಳುಪಿನ ರಾಶಿ ಹಣ
ಇಂದಲ್ಲ ನಾಳೆಗೆ ಕಾದಿದೆ ನಿಮ್ಮಯ ಹೊಸ ಹಗರಣ !!

ಹೆಸರು ಪಡೆಯಲು ಬೇಕಾಗಿತ್ತು ಅಣ್ಣನ ಕೃಪೆ
ಹೋರಾಟದ ಹೆಸರಿನಲ್ಲಿ
ನಡೆಯಿತು ಹೊಸ ರಾಜಕೀಯ ಪಕ್ಷದ ನೀಚ ಅರಾಜಕತೆ !!

ಬಡವನ ಹೆಸರಲಿ ಬೇಕಾಗಿತ್ತೆ ಬಂಡಾಯ
ಅಹಂಕಾರದ ಗುಂಪಿಗೆ
ಅವಶ್ಯಕವಾಗಿತ್ತು ಅಧಿಕಾರದ ಆಸೆಯ ರಾಜಕೀಯ ಜಯ !!

-- ಶ್ರೀಧರ ಐತಾಳ ದೇವಳಿ

Sunday, December 29, 2013

ಅನಂತ




ಅನಂತ "ಭಯ" ವ ಪಟ್ಟಾಗ
"ಅಭಯ" ಸಿಗುವುದು
ಅನಂತ "ಜಯ" ವ ಪಡೆದರೆ
"ಅಜೇಯ" ರಾಗುವರು  !!

ಅನಂತ "ಗೌರವ" ವ ಪಡೆದರೆ
"ಅಗೌರವ" ಹೋಗುವುದು
ಅನಂತ "ಮೌಲ್ಯ" ವ ಕಲಿತರೆ
"ಅಮೂಲ್ಯ" ವಾಗುವುದು  !!
 
ಅನಂತ "ಪಾಪ"ವ  ಮಾಡಿದರೆ
"ಅಪಾಯ" ವಾಗುವುದು
ಅನಂತ "ತಂತ್ರ" ವ ಮಾಡಿದರೆ
"ಅತಂತ್ರ" ವಾಗುವುದು !!

ಅನಂತ "ಧರ್ಮ" ವ ಪಾಲಿಸಿದರೆ
"ಅಧರ್ಮ" ವಾದೀತು
ಅನಂತ  "ಅರ್ಥ" ವ ಸಂಪಾದಿಸಿ
"ಅನರ್ಥ" ವಾದೀತು !!

ಅನಂತ "ನಾಥ" ರಿಗೆ ಹುಟ್ಟಿದರೆ
"ಅನಾಥ" ರಾಗುವರು 
"ಅನಂತ ಶಯನ" ನ ಬೇಡಿದರೆ
"ಆನಂದ" ದೊರಕುವುದು !!

--ಶ್ರೀಧರ ಐತಾಳ ದೇವಳಿ


Friday, December 27, 2013

ಅಗಲಿಕೆ



ನೀ ಯನ್ನ ತೊರೆದರು
ನಿನ್ನ ನಾ ಮರೆಯದಿರುವೆ
ನಿನ್ನ ಅಗಲಿಕೆಯ ಶಿಕ್ಷೆಯನು
ಸದಾ ಅನುಭವಿಸುತಲಿರುವೆ !!

ನೀ ಮೊನ್ನೆ ಹೋದಾಗ
ನಿನ್ನ ಆ ಹೆಜ್ಜೆ ಗುರುತುಗಳು
ಬಿರುಗಾಳಿ ಮಳೆಗೂ ಅಳಿಸದೆ 
ನಿನ್ನೆಡೆಗೆ ಕೈಬೀಸಿ ತಳ್ಳುತಲಿದೆ !!

ನೀ ಒಮ್ಮೆ ಕರಗಿದರೆ 
ಮರೆಯದೆ ಕರೆಯನ್ನನು 
ಮರುಕ್ಷಣದಿ ನಿನ್ನೊಡಲ ಸೇರಿ
ಮುಂದೆಂದು ಬಿಡಲಾರೆ ನಿನ್ನನು !!

-- ಶ್ರೀಧರ ಐತಾಳ ದೇವಳಿ

Tuesday, December 24, 2013

ನಂಬದಿರು



ನಂಬದಿರು ನಂಬದಿರು ಪರರ ಮನವ
ನಿಮ್ಮ ಹಿತೈಷಿಯೆಂದು  ಭ್ರಮಿಸಿ ಮನಕೆ ಘಾತಿಸುವರು
ನಂಬದಿರು ನಂಬದಿರು ಪರರ ಮನವ !!

ವಂಚನೆಯ ಎಂದಾದರು ಸಹಿಸಬಹುದು
ವಂಚಕನ ಸೇರಿಸಲಾರೆವು
ನಿಂದನೆಯ ಎಷ್ಟಾದರೂ ಮರೆಯಬಹುದು
ನಿಂದಕನ ಮರೆಯಲಾರೆವು !!

ನಂಬದಿರು ನಂಬದಿರು ಪರರ ಮನವ
ನಿಮ್ಮ ಆಪ್ತನೆಂದು ಕರೆಸಿಕೊಂಡು ಕ್ಷಣಕೆ ಬದಲಾಗುವರು
ನಂಬದಿರು ನಂಬದಿರು ಪರರ ಮನವ !!

ಸಮಯಸಾಧಕನ ಕಪಟ ವರ್ಣನೆಯ
ಬಣ್ಣದ ಮಾತನು ಮೆಚ್ಚಲಾರೆವು
ವಿಶ್ವಾಸಘಾತಕನ ಕುಟುಕು ಸಲ್ಲಾಪದ
ಚುಚ್ಚುಮಾತನ್ನು ಇಚ್ಚಿಸಲಾರೆವು !!

ನಂಬದಿರು ನಂಬದಿರು ಪರರ ಮನವ
ನಂಬಿಸಿ ಮೋಸಮಾಡುವವ "ಈ ಮಾನವ" 
ನಂಬದಿರು ನಂಬದಿರು ಪರರ ಮನವ !!


Tuesday, December 10, 2013

ಗೆಳೆಯರಿಬ್ಬರು




ಗಿಡಗಳೆರಡು ಬೆಳೆದಾವು
ಬರಿ ನೀರು ಮಣ್ಣಿನ ಬಲದಲ್ಲಿ
ಆಸೆಗಳೆರಡು ಸುಳಿದಾವು
ಹೆಣ್ಣು ಗಂಡಿನ ಸಹವಾಸದಲ್ಲಿ !!

ಕಷ್ಟಗಳೆರಡು ಬಂದಾವು
ಸುಖ ದುಖದ ಈ ಜೀವನದಲ್ಲಿ
ಮೋಸಗಳೆರಡು ಆದಾವು
ಲಾಭ ನಷ್ಟದ ವ್ಯವಹಾರದಲ್ಲಿ !!

ಒಡಕುಗಳೆರಡು ಕಂಡಾವು
ಗಂಡ ಹೆಂಡಿರ ಸಂಸಾರದಲ್ಲಿ
ಗೆಳೆಯರಿಬ್ಬರು ಬದಲಾಗರು
ಕೃಷ್ಣ ಸುಧಾಮರ ಈ ತವರಲ್ಲಿ !!

ಶ್ರೀಧರ ಐತಾಳ ದೇವಳಿ

Friday, December 6, 2013

ಓ ಕನಸೇ ನೀ ಎಷ್ಟೊಂದು ಸುಂದರ




"ಓ ಕನಸೇ ನೀ ಎಷ್ಟೊಂದು ಸುಂದರ"

ರಾತ್ರಿ ನಿದ್ರೆಯಲ್ಲಿ ಬಂದು
ಮನಕೆ ಮುದ ನೀಡುವೆ
ಬೆಳಿಗ್ಗೆ ನಿನ್ನ ನೆನೆಯಲು
ನೀ ಮರತೆ ಹೋಗಿರುವೆ
ಓ ಕನಸೇ ನೀ ಎಷ್ಟೊಂದು ಸುಂದರ !!


ಮಕ್ಕಳ ಸವಿ ನಿದ್ರೆಯಲ್ಲೂ
ನೀ ತಪ್ಪದೆ ಬರುವಿಯಂತೆ
ಕುಶಿಯಕೊಟ್ಟು ನೀ ನಗಿಸುವೆ
ಕಂದನ ಮುಕವನು ಅರಳಿಸುವೆ
ಓ ಕನಸೇ ನೀ ಎಷ್ಟೊಂದು ಸುಂದರ !!


ಕನಸಲಿ ಆಶಾ ಗೋಪುರ ಕಟ್ಟಿ
ಕ್ಷಣಿಕ ಸಾಧನೆಗೆ ಗೆಲ್ಲಿಸಿರುವೆ
ಕನಸಲ್ಲಾದರೂ ತೃಪ್ತಿ ಕೊಡುವೆ
ಮನಕೆ ಕೊಂಚ ತಂಪನೀಯುವೆ
ಓ ಕನಸೇ ನೀ ಎಷ್ಟೊಂದು ಸುಂದರ !!


ಒಮ್ಮೆ ಬಂದ ಕನಸು ಮತ್ತೆ ಬಾರದು
ನಮ್ಮ ಆಪ್ತರನ್ನು ಎಂದೂ ಮರೆಯದು
ಭಯಾನಕವಾದರೆ ಮೊಟಕಾಗುವುದು
ಸೋಗಸಾದರೆ ದೀರ್ಘವಾಗಿರುವುದು
ಓ ಕನಸೇ ನೀ ಎಷ್ಟೊಂದು ಸುಂದರ !!

ಶ್ರೀಧರ ಐತಾಳ ದೇವಳಿ

Wednesday, December 4, 2013

ಎನಿತು ಭಾಗ್ಯ ತಾಯೆ ನಿನದು







ತಾನು ಹೆತ್ತ ಮಗುವಲ್ಲದಿದ್ದರು
ಎದೆ ಹಾಲು ಉಣಿಸುವ ಭಾಗ್ಯ
ನಿನ್ನದಾಯಿತಲ್ಲೇ ಯಶೋದೆ...
ಎನಿತು ಭಾಗ್ಯ ತಾಯೆ ನಿನದು ?

ಮೂರು ಲೋಕದ ಒಡೆಯನಿಗೆ
ನಿನ್ನ ಕೈಯಾರೆ ತುತ್ತು ತೆತ್ತಿರುವೆ
ಗೊಲ್ಲ ಕೇರಿಯ ಬೆಣ್ಣೆಯಿತ್ತಿರುವೆ 
ಎನಿತು ಭಾಗ್ಯ ತಾಯೆ ನಿನದು ?

ತೊಟ್ಟಿಲ ಕಂದನ ಲೀಲೆಯ ಕಂಡೆ 
ಬಾಯೊಳು ಸಮಸ್ತ ಲೋಕವ ಕಂಡೆ
ದೇವರ ದೇವನ ಮಮತೆಯ ತಾಯಿ 
ಎನಿತು ಭಾಗ್ಯ ತಾಯೆ ನಿನದು ?

ಪುರುಷ ಸಿಂಹನ ತೊಳಲಿ ಆಡಿಸಿ
ವಿರಾಟ ರೂಪವ ಕಣ್ಣಲಿ ನೊಡಲು
ಹಲವು ಜನ್ಮದ ಪುಣ್ಯವು ಸಾಲದು 
ಎನಿತು ಭಾಗ್ಯ ತಾಯೆ ನಿನದು ? 

ಯಶೋದೆ...
ಎನಿತು ಭಾಗ್ಯ ತಾಯೆ ನಿನದು?

--Sridhar Aithal Devali