ನನ್ನ ಕೆಲವು ಪ್ರಯತ್ನಗಳು ನಿಮ್ಮ ಮುಂದೆ ತೆರೆದಿಟ್ಟಿದ್ದೇನೆ. ತಿದ್ದಿ,ವಿಮರ್ಶಿಸಿ,ಪ್ರೋತ್ಸಾಹಿಸುವ ಕೆಲಸ ನಿಮ್ಮದು. ನಿಮ್ಮ ಈ ಗೆಳೆಯನಿಗಾಗಿ ಮಾಡುವಿರಿ ತಾನೇ ?
Thursday, January 30, 2014
Monday, January 27, 2014
ಆಮಂತ್ರಿಸುವೆವು
ಆಮಂತ್ರಿಸುವೆವು ನಿಮಗೆ
ಮುದ್ದಿನ ಮಗಳ ಮದುವೆಗೆ !!
ಬನ್ನಿರೈ ಬಂಧುಗಳೇ
ಸಡಗರದಿ ಈ ಕರೆಗೆ
ಕಿರಿಮಗಳ ಮದುವೆಗೆ !!
ತನ್ನಿರೈ ನವೋಲ್ಲಾಸ
ನಿಮ್ಮಯ ಆಗಮನದಿಂ
ನಲ್ಮೆಯ ಮದುಮಗಳಿಗೆ !!
ಹರಸಿರೈ ಮನತುಂಬಿ
ನಮ್ಮ ನವ ದಂಪತಿಗಳಿಗೆ
ಅದುವೆ ನಿಮ್ಮ ಉಡುಗೊರೆ !!
ಮರೆಯದಿರಿ ದಿನವನ್ನು
ಹುಡುಕದಿರಿ ಕಾರಣವನು
ತಪ್ಪಿಸಿಕೊಳ್ಳಲು ಆ ಕ್ಷಣಗಳನು !!
ಬಂದೆ ಬರುವಿರಿ ನೀವೆಂದು
ಕಾಯುವೆವು ತುದಿಗಾಲಿನಲಿ
ವಾದಿರಾಜ ಕಲ್ಯಾಣ ಮಂಟಪದಲಿ !!
-- ಶ್ರೀಮತಿ ಮತ್ತು ಶ್ರೀ ನಾರಾಯಣ ಹೊಳ್ಳ
Thursday, January 23, 2014
ಇದು ಯಾರ ಬಯಕೆ ?
ರವಿಯ ಸುಂದರ ರಶ್ಮಿಗೆ
ಅರಳಿ ನಿಂತ ಮಲ್ಲಿಗೆಯು
ಬಳಿಗೆ ಬಂದ ಚಿಟ್ಟೆಯಲಿ
ಬೇಡಿತು ತನ್ನ ಇಂಗಿತವ
ಪರಮಾತ್ಮನ ಪಾದಸೇರುವ !!
ಬೇಡಿದ ವರವ ಕೊಡುವ
ಜಗದೀಶ್ವರನ ಕೃಪೆಯಿಂದ
ಭಕ್ತನ ಶ್ರದ್ದೆಯ ಸಾಧನವಾಗಿ
ಹೂವ ಬಯಕೆಯು ತೀರಿತು
ದೇವರ ದೇವನ ಶಿರವ ಸೇರಿತು !!
ಪರಮ ಭಕ್ತರಿಗೆ ಕೊಡಲು
ಹೂವು ಪ್ರಸಾದದ ತಟ್ಟೆಗೆ
ಕ್ಷಣ ಮಾತ್ರದಿ ತೆಗೆಯಲ್ಪಟ್ಟಿತ್ತು
ಪೂಜಾರಿಯ ಮನವ ಸೆಳೆದ
ಸುಂದರ ತರುಣಿಗದುವೆ ಲಭಿಸಿತು !!
-- ಶ್ರೀಧರ ಐತಾಳ ದೇವಳಿ
Tuesday, January 21, 2014
ಅತೃಪ್ತಿಯೇ
ನಿನ್ನ ಮೊಗದಲಿ
ನಗುವ ನೋಡುತ ನಿಂತೆ
ಮುಚ್ಚದಿರು ನಿನ್ನ ಕಣ್ಣುಗಳನು
ಎಷ್ಟು ನೋಡಿದರೂ ಅತೃಪ್ತಿಯೇ
ಕಾಡುತಿದೆ ಯನ್ನನ !!
ನಿನ್ನ ನಗುವಿನಲಿ
ಮಿನುಗುವ ನಯನದ ಕಾಂತಿ
ಮುದುಡಿದ ತಾವರೆಯನೂ ಒಮ್ಮೆ
ಗಾಳಿ ಬೀಸಿ ಅರಳಿಸಿದಂತೆ
ಭಾಸವಾಗುತಿದೆ ಯನಗೆ !!
ನಲ್ಲೆ ನೀ ನಿಂತಲ್ಲೇ
ನಕ್ಕರೂ ಅದೇನಿದೆ ನಿನ್ನಲ್ಲೇ
ಕಣ್ಣ ಮಿಟುಕಿಸಲು ಮನಸಿಲ್ಲ
ನಿನ್ನನೇ ನೋಡುವ ಆಸೆಯು
ಬರುತಲಿದೆ ನನ್ನಲ್ಲೇ !!
---ಶ್ರೀಧರ ಐತಾಳ ದೇವಳಿ
Thursday, January 16, 2014
ಓ
ಓ ಕೋಮಲೆ
ನಿನ್ನ ನಯನದ
ಕುಡಿ ನೋಟಕ್ಕೆ
ಹತನಾದ ದುಷ್ಯಂತ ನಾ !!
ಓ ಅಭಲೇ
ನಿನ್ನ ಧೈರ್ಯದ
ಒಣ ಹಟಕ್ಕೆ
ಬೆರಗಾದ ಮಹಾತ್ಮ ನಾ !!
ಓ ಶ್ಯಾಮಲೆ
ನಿನ್ನ ಸುಂದರ
ಮೈ ಮಾಟಕ್ಕೆ
ವರನಾದ ಮನ್ಮತ ನಾ !!
ಓ ನಿರ್ಮಲೆ
ನಿನ್ನ ಮುಗ್ದ
ಮನ ಪುಟಕ್ಕೆ
ದಾಸನಾದ ಕಾಂತ ನಾ !!
ಓ ಚಂಚಲೆ
ನಿನ್ನ ಅಕಾಲಿಕ
ಚಿತ್ತ ಓಟಕ್ಕೆ
ಚಕಿತನಾದ ಪತಿಯೇ ನಾ !!
---ಶ್ರೀಧರ ಐತಾಳ ದೇವಳಿ
ಒಂದಾನೊಂದು ಪ್ರೇಮಕವಿತೆ
ಪ್ರಿಯೇ ನಿನಗಾಗಿ ಬರೆದಿದ್ದೆ
ನಾನೊಂದು "ಪ್ರೇಮಕವಿತೆ"ಯ
ತಾಳೆಗರಿಯ ಮೇಲೊಂದು
ತಾಳಲಾರದ ಮೇಲೊಂದು
ತಾಳ್ಮೆಯರಿತ ಮೇಲೊಂದು
ತಾಳೆ ನೋಡಿ ಮತ್ತೊಂದು !!
ತಾಳೆಗರಿಯ ಮೇಲೆ ಬರೆದಿದ್ದು
ತರುಣನ ತಲೆಯಲ್ಲಿ ಬಂದ
ಆಸೆಗಳ ಚಪಲ !
ತಾಳಲಾರದ ಮೇಲೆ ಬರೆದಿದ್ದು
ಯೌವನದ ಬಿಸಿಯನ್ನು ತಂದ
ಮಾನಸಿಕ ಚಂಚಲ !
ತಾಳ್ಮೆಯರಿತ ಮೇಲೆ ಬರೆದಿದ್ದು
ಮಧ್ಯಮ ವಯಸ್ಸಿನಲ್ಲಿ ಕಂಡ
ಸಾಮಾನ್ಯ ಕುತೂಹಲ !
ತಾಳೆ ನೋಡಿದ ಮೇಲೆ ಬರೆದಿದ್ದು
ಜಾತಕ ಹೊಂದಾಣಿಕೆ ನಂತರದ
ಮದುವೆಯ ಕಂಕಣಬಲ !
ಪ್ರಿಯೇ ನಿನಗಾಗಿ ಬರೆದಿದ್ದೆ
ನಾನೊಂದು "ಪ್ರೇಮಕವಿತೆ"ಯ !!
---ಶ್ರೀಧರ ಐತಾಳ ದೇವಳಿ
ಸಿಹಿ ಜೇನ ಹನಿ
ನಿನ್ನ ನವಿರಾದ ಮೇಲ್ತುಟಿ
ಅಂಚಿನಲಿ ನೀರಾಗಿ ಕಾದಿದ್ದೆ
ಎಂದು ನನ್ನ ಮಧುರ ಸಿಹಿ
ನಿನ್ನ ಇನಿಯನಿಗೆ ಹಂಚಲೆಂದು
ಅವನಲ್ಲಿ ಆಸೆಯ ವ್ರದ್ದಿಸಲೆಂದು !!
ಅವಸರದಿ ನೀಯನ್ನ ವರಸಿ ಬಿಟ್ಟೆ
ಗೊಂದಲದಿ ನಿನ್ನ ಕರವಸ್ತ್ರಕ್ಕೆ
ನಾ ಸೆರೆಯಾಗಿ ಸೋತು ಬಿಟ್ಟೆ
ನಾನಿರದ ನಿನ್ನ ತುಟಿ ಅಂಚಿಗೆ
ಬಣ್ಣ ಹಚ್ಚಿ ನನ್ನ ನೀ ಮರೆತು ಬಿಟ್ಟೆ !!
---ಶ್ರೀಧರ ಐತಾಳ ದೇವಳಿ
ಚಿತ್ರಕ್ರಪೆ : ಅಂತರ್ಜಾಲ
( ವರಸಿ = ದ್ರವ ವಸ್ತುವನ್ನ ಆ ಸ್ಥಳದಿಂದ ತೆಗೆಯುವುದು )
Monday, January 13, 2014
ಪ್ರೇಮಪತ್ರ
ನನ್ನ ಒಲುಮೆಯ ಗೆಳತಿಯೇ ಇದ ಕೇಳು
ನಿನಗಾಗಿಯೆ ಬರೆದಿಹೆ ಈ ಸಾಲು
ಒಲವಿನಲಿ
ನಿನ್ನ ಬಯಕೆಯಲಿ
ತೊದಲುತ ಬರೆದೆನು ಈ ಸಾಲು
ನನ್ನ ಒಲುಮೆಯ ಗೆಳತಿಯೇ ಇದ ಕೇಳು !!
ಹರುಷವ ನೋಡುವೆ ನಿನ್ನೊಳು ಎಂದಿಗೂ
ನಿಮಿಷವೂ ನಿನ್ನನು ನೆನೆಯುವೆನು
ಜೊತೆಗಿರಲು
ನಿನ್ನ ಬಳಿಯಿರಲು
ಬಯಸುತ ಬರೆದೆನು ಈ ಸಾಲು
ನನ್ನ ಒಲುಮೆಯ ಗೆಳತಿಯೇ ಇದ ಕೇಳು !!
ತಾಯಾಗಿರುವೆ ನೀನಿಂದು ಮಮತೆಯಲಿ
ಮಗುವಾಗುವೆ ನಾನು ಪ್ರೀತಿಯಲಿ
ಮಲಗುತಲಿ
ನಿನ್ನ ಮಡಿಲಿನಲಿ
ಬದುಕಲು ಬರೆದೆನು ಈ ಸಾಲು
ನನ್ನ ಒಲುಮೆಯ ಗೆಳತಿಯೇ ಇದ ಕೇಳು !!
---ಶ್ರೀಧರ ಐತಾಳ ದೇವಳಿ
Thursday, January 9, 2014
ಹೃದಯ
ನನ್ನವಳ ನಗುವಿನಲ್ಲಿ ಮೂಡಿತ್ತು
ಕೆನ್ನೆಯ ಗುಳಿ
ಕೆನ್ನೆಯ ತುಂಬೆಲ್ಲ ಮಿನುಗುತಿತ್ತು
ಕಾಂತಿಯ ಹಾವಳಿ !!
ನನ್ನಾಕೆಯ ಮಾತಿನಲಿ ತುಂಬಿತ್ತು
ಪ್ರೀತಿಯ ಮಳೆ
ಪ್ರೀತಿಯಲಿ ನನ್ನವಳ ಸೋಲಿಸಿತ್ತು
ಪ್ರೇಮದ ಕಳೆ !!
ನನ್ನರಸಿಯ ದೃಷ್ಟಿಯದು ಸೆಳೆದಿತ್ತು
ನನ್ನಯ ಹೃದಯ
ನನ್ನಲ್ಲಿರುವ ಆಸೆಯನು ಸ್ಪಂದಿಸಿತ್ತು
ನನ್ನವಳ ಹೃದಯ !!
---ಶ್ರೀಧರ ಐತಾಳ ದೇವಳಿ
ವ್ಯತ್ಯಾಸವಿಷ್ಟೇ
ಹಿಂದೆ ಕಷ್ಟಪಟ್ಟು ಬೆವರುಸುರಿಸಿ ದುಡಿದು
ಮನೆಯನ್ನ ಸಾಗಿಸುತ್ತಿದ್ದರು
ಇವಾಗ ಕಷ್ಟಕೊಟ್ಟು ಅವರಿಂದಲೇ ದುಡಿದು
ಮನೆಯಿಂದ ಸಾಗಿಸುತ್ತಿದ್ದಾರೆ...
ಹಿಂದೆ ದೇಹಶ್ರಮವನ್ನ ಮರೆಯಲು ಕುಡಿದು
ಜೀವನವನ್ನು ನಡೆಸುತ್ತಿದ್ದರು
ಇವಾಗ ವಯಸ್ಸಿಗೆ ಮನಸೋಯಿಚ್ಚೆ ಕುಡಿದು
ಜೀವವನ್ನೇ ಕಡೆಗಣಿಸುತ್ತಿದ್ದಾರೆ...
ಹಿಂದೆ ಕಾನೂನು ಇತಿಹಾಸವನ್ನು ಕಲಿತು
ರಾಜಕೀಯಕ್ಕೆ ಬರುತ್ತಿದ್ದರು
ಇವಾಗ ಜನರ ಮನಸ್ತಿತಿಯನ್ನು ಕಲಿತು
ರಾಜಕೀಯ ಮಾಡುತಿದ್ದಾರೆ....
ನೀವೇನಂತೀರಿ ???
--ಶ್ರೀಧರ ಐತಾಳ ದೇವಳಿ
Tuesday, January 7, 2014
ತುಂಟ ಕೈದಿ ಗಂಡ
ನಿನ್ನ ಅಂದಕ್ಕೆ ಸೆರೆಯಾದ
ಗಂಡ ನಾನು !!
ಹೆಜ್ಜೆಯ ಸಮ್ಮಿಲನವೋ
ಗೆಜ್ಜೆಯ ಸವಿ ಸಪ್ಪಳವೊ
ಲಜ್ಜೆಯ ಸಮ್ಮೊಹನವೋ
ಹೆಜ್ಜೇನಿನ ಸಿಹಿ ಸಂತುಲನವೋ !!
ನಿನ್ನ ಸೊಂಟಕ್ಕೆ ಬಲಿಯಾದ
ತುಂಟ ನಾನು !!
ನಡಿಗೆಯ ಮೋಹಕತೆಯೋ
ನಿನ್ನ ಮೇಲಿನ ಮಮತೆಯೋ
ನಿನ್ನಲ್ಲಡಗಿದ ಮಾದಕತೆಯೋ
ಸುರ-ಕನ್ನಿಕೆಯರ ಸಮಾನತೆಯೋ !!
ನಿನ್ನ ಕಂಠಕ್ಕೆ ಬಂದಿಯಾದ
ಕೈದಿ ನಾನು !!
ನಾಟ್ಯದ ಅರಗಿಣಿಯೋ
ಕಾಡುವ ಮೋಹಿನಿಯೋ
ಸೆಳೆಯುವ ಮುದ್ದಿನಮಣಿಯೋ
ಸೆರೆಹಿಡಿವ ಸಪ್ತ ಸ್ವರ ಮಾಧುರ್ಯವೋ !!
ಒಟ್ಟಾರೆ ಅಂದಕ್ಕೆ ಸೆರೆಯಾಗಿ
ಸೊಂಟಕ್ಕೆ ಬಲಿಯಾಗಿ
ಕಂಠಕ್ಕೆ ಬಂದಿಯಾದ
ತುಂಟ ಕೈದಿ ಗಂಡ ನಾನು !!
--ಶ್ರೀಧರ ಐತಾಳ ದೇವಳಿ
Friday, January 3, 2014
ಒಂಟಿತನ
ಚಮತ್ಕಾರ ಏನು ಇಲ್ಲಾ
ನನ್ನದು ಸಹಜತನ
ನಿಮ್ಮೆಲ್ಲರ ನಡುವೆಯೂ ನನಗೆ
ಇನ್ನೂ ಕಾಡುತಿದೆ ಒಂಟಿತನ !!
ಮನೆಯ ಬಾಗಿಲು ತೆಗೆದಾಗ
ಸುತ್ತಲೂ ಕತ್ತಲು
ಮನೆಯಾಕೆ ಊರಲ್ಲಿದ್ದರೆ
ಯಾರಿರುವರು ದೀಪ ಹಚ್ಚಲು !!
ಊಟದ ಕೋಣೆಗೆ ಹೋದಾಗ
ಎಲ್ಲೆಲ್ಲೂ ಬಟ್ಟಲು
ಮನೆಕೆಲೆಸ ಮಾಡದಿದ್ದರೆ
ಆಗುವುದು ಅಡಿಗೆಮನೆ ಬಚ್ಚಲು !!
ಕಸವ ತೆಗೆಯಲು ಹೋದರೆ
ಮನೆತುಂಬಾ ಬಾಟಿಲು
ಹೆಂಡತಿ ತವರಲ್ಲಿದ್ದರೆ
ಗಂಡನಿಗಿದೆ ನೂರಾರು ಸವಾಲು !!
--ಶ್ರೀಧರ ಐತಾಳ ದೇವಳಿ
Thursday, January 2, 2014
ನನ್ನ ನಿನ್ನ ನಡುವೆ
ನಿನ್ನ ನೆನಪೇ ನನ್ನ ಉಸಿರು
ನನ್ನ ಉಸಿರಲಿ ನಿನ್ನ ಹೆಸರು !!
ನನ್ನ ಜೀವದ ಆಸರೆ
ನಿನ್ನ ಪ್ರೀತಿಗೆ ನಾ ಸೆರೆ
ನಿನ್ನ ಸನಿಹವ ಬಯಸುತಿರೆ
ನನ್ನ ವಿರಹವ ನಾ ಮರೆಯುವೆ !!
ನನ್ನ ನೆರಳ ಕಂಡರೆ
ನಿನ್ನ ನೆನಪು ಬರುತಿರೆ
ನಿನ್ನ ಸ್ಪರ್ಶವ ನೆನೆಯುತಿರೆ
ನನ್ನ ಮನದಲಿ ಏನು ಹರುಷವೇ !!
ನನ್ನ ಮನೆಯ ಅಪ್ಸರೆ
ನಿನ್ನ ಮನವೇ ನನ್ನ ಹೊರೆ
ನಿನ್ನ ನೆನೆಯಲು ನಾ ಕೂತರೆ
ನನ್ನ ಇರುವಿಕೆಯ ನಾ ಮರೆಯುವೆ !!
ನಿನ್ನ ನೆನಪೇ ನನ್ನ ಉಸಿರು
ನನ್ನ ಉಸಿರಲಿ ನಿನ್ನ ಹೆಸರು
--ಶ್ರೀಧರ ಐತಾಳ ದೇವಳಿ
Subscribe to:
Posts (Atom)